ಒಂದು ದೇಶ - ಒಂದು ಚುನಾವಣೆ
ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಅವಶ್ಯಕ ಹಾಗೂ ಅನಿವಾರ್ಯ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದೆನಿಸಿರುವ ಭಾರತದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಸಂವಿಧಾನದಿಂದ ದತ್ತವಾದ ಮತದಾನ ಹಕ್ಕಿನ ಮೂಲಕ ಸಾರ್ವತ್ರಿಕ ಚುನಾವಣೆಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಪ್ರಜೆಗಳು ಹೊಂದಿರುವ ಈ ಮತದಾನದ ಹಕ್ಕಿನ ಮೂಲಕ ಅವರು ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧಾರ ಮಾಡುತ್ತಾರೆ ಮತ್ತು ತಮ್ಮ ರಾಜಕೀಯ ಹಕ್ಕುಗಳನ್ನು ಚಲಾಯಿಸುತ್ತಾರೆ. 7 ರಾಷ್ಟ್ರೀಯ ಪಕ್ಷಗಳು, 150ಕ್ಕೂ ಅಧಿಕ ರಾಜಕೀಯ ಪಕ್ಷಗಳು, 1200ಕ್ಕೂ ಅಧಿಕ ನೊಂದಾಯಿತ ರಾಜಕೀಯ ಪಕ್ಷಗಳು, 90 ಕೋಟಿ ಮತದಾರರು, 10ಲಕ್ಷಕ್ಕೂ ಅಧಿಕ ಮತಗಟ್ಟೆಗಳನ್ನು ಹೊಂದಿರುವ ಬೃಹತ್ ಚುನಾವಣಾ ಪ್ರಕ್ರಿಯೆ ಭಾರತ ದೇಶದ್ದಾಗಿದ್ದು, ಪ್ರತಿ ವರ್ಷ ಭಾರತದ ಒಂದಲ್ಲಾ ಒಂದು ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದರಿಂದಾಗಿ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಎಂಬುದು ಅತ್ಯಂತ ವೆಚ್ಚದಾಯಕ ಮತ್ತು ತ್ರಾಸದಾಯಕವಾಗಿದ್ದು ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೂ ಕೂಡ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ಕೂಗು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕೇಳಿಬರತೊಡಗಿದೆ.
ಏನಿದು ಒಂದು ದೇಶ, ಒಂದೇ ಚುನಾವಣೆ?
ಲೋಕಸಭೆ ಚುನಾವಣೆಯ ಜೊತೆಗೆ ಎಲ್ಲಾ ರಾಜ್ಯಗಳ ವಿಧಾನಸಭೆಗೂ ಏಕಕಾಲಕ್ಕೆ ಚುನಾವಣೆ ಮಾಡುವ ಪದ್ಧತಿಯನ್ನು ಒಂದು ದೇಶ, ಒಂದು ಚುನಾವಣೆ ಎಂದು ಕರೆಯುತ್ತಾರೆ.
ಭಾರತ 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳನ್ನು ಪ್ರದೇಶಗಳನ್ನು ಹೊಂದಿರುವ ಬೃಹತ್ ರಾಷ್ಟ್ರವಾಗಿದ್ದು ವಿಶ್ವದ 7ನೇ ದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ದೊಡ್ಡ ರಾಷ್ಟ್ರದಲ್ಲಿ ಪ್ರತಿ ವರ್ಷ ಒಂದಲ್ಲಾ ಒಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಈ ಸಂದರ್ಭದಲ್ಲಿ ಜಾರಿಯಾಗುವ ನೀತಿ ಸಂಹಿತೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತವೆ. ಅಲ್ಲದೆ ಚುನಾವಣೆಯ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಮಗ್ನರಾಗಿರುವುರಿಂದ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗುತ್ತದೆ. ಆದ್ದರಿಂದ ಲೋಕಸಭಾ ಚುನಾವಣೆಯ ಜೊತೆಗೆ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಸುವ ‘ಒಂದು ದೇಶ, ಒಂದು ಚುನಾವಣೆ’ ಪ್ರಕ್ರಿಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತಿದೆ.
ಒಂದು ದೇಶ-ಒಂದು ಚುನಾವಣೆಯ ಅಗತ್ಯತೆ
ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಬೇಕಾದ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಏಕೆಂದರೆ, ಪ್ರತಿ ವರ್ಷವೂ ಒಂದಲ್ಲಾ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುತ್ತವೆ. ಪದೇ ಪದೇ ಚುನಾವಣೆಗಳಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ. ಖರ್ಚಾಗುತ್ತದೆ. ರಾಜಕೀಯ ಪಕ್ಷಗಳು ಕೂಡ ಪ್ರಚಾರಕ್ಕಾಗಿ ಕೋಟ್ಯಾಂತರ ರೂ. ಹಣ ಖರ್ಚು ಮಾಡುತ್ತವೆ. ಸರ್ಕಾರಗಳು ಕೂಡ ಮತಬ್ಯಾಂಕ್ಗಳ ಓಲಿಕೆಗಾಗಿಯೇ ಕೆಲಸ ಮಾಡಬೇಕಾದ ಸನ್ನಿವೇಶ ಉಳಿಯುತ್ತದೆ. ಚುನಾವಣಾ ಆಯೋಗವು ಯಾವುದೇ ಚುನಾವಣೆಗಳನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸುತ್ತಿದಂತೆ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗುತ್ತವೆ. ಚುನಾವಣಾ ಪ್ರಕ್ರಿಯೆ ಮುಗಿಯುವ 45 ದಿನಗಳ ಕಾಲ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗಿಯೇ ಇರುತ್ತವೆ. ಅಧಿಕಾರಿಗಳು ಚುನಾವಣಾ ಆಯೋಗದ ನಿಯಂತ್ರಣದಲ್ಲಿರುವುದರಿಂದ ಈ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ವರ್ಷವಿಡೀ ಒಂದಲ್ಲಾ ಒಂದು ರಾಜ್ಯದ ವಿಧಾನಸಭೆ ಚುನಾವಣೆ ನಡೆಯುವುದರಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಉಸ್ತುವಾರಿಗೆ ಎಂಬಂತೆ ಸರ್ಕಾರವಿದ್ದರೂ ಕೂಡ ಅಭಿವೃದ್ಧಿ ಕಾರ್ಯದ ನಿಟ್ಟಿನಲ್ಲಿ ಯಾವುದೇ ಅರ್ಥಪೂರ್ಣ, ಯೋಜಿತ ಕಾರ್ಯ ನಡೆಯುವುದಿಲ್ಲ. ಚುನಾವಣಾ ಸಮಯದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿದರೆ ಇಲ್ಲವೇ ಕೆಲ ಯೋಜನೆಗಳನ್ನು ಘೋಷಿಸಿದರೂ ಕೂಡ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಬಳಸಲು ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಚುನಾವಣೆ ಘೋಷಣೆಯಾದ ನಂತರ ಬಹುಪಾಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ನೈಜ ಸಮಸ್ಯೆಗಳಿಂದ ಆಚಗೆ ಮುಖ ತಿರುಗಿಸಿ ಚುನಾವಣಾ ಕರ್ತ್ಯವ್ಯಗಳಲ್ಲಿ ನಿರತರಾಗಿರುವುದರಿಂದ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದು ದೇಶ-ಒಂದು ಚುನಾವಣೆ ಎಂಬುದು ಇಂದಿನ ತುರ್ತು ಅಗತ್ಯವಾಗಿದೆ.
ಒಂದೇ ಚುನಾನಣೆ ಇತಿಹಾಸ
ಭಾರತದಲ್ಲಿ ಒಂದು ದೇಶ-ಒಂದು ಚುನಾವಣೆ ಎಂಬ ಪರಿಕಲ್ಪನೆ ಸುಮಾರು 68 ವರ್ಷಗಳ ಇತಿಹಾಸವಿದೆ. 1950 ಜನವರಿ 26ರಂದು ಭಾತರದ ಸಂವಿಧಾನ ಜಾರಿಯಾದ ಬಳಿಕ 1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯ ವೇಳೆ ಭಾರತದ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೂ ಕೂಡ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದವು. ಆದಾದ ಬಳಿಕ 1957, 1962 ಮತ್ತು 1967ರಲ್ಲಿ ಕೂಡ ಲೋಕಸಭೆ ಹಾಗೂ ಹಲವು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲಾಗಿತ್ತು. ಆದರೆ 1967ರ ನಂತರ ನಡೆದ ಹಲವು ರಾಜಕೀಯ ಪಕ್ಷಗಳಿಂದಾಗಿ ರಾಜಕೀಯ ಅಸ್ಥಿರತೆ ಉಂಟಾಗಿದ್ದರಿಂದ 1968 ಮತ್ತು 1969ರಲ್ಲಿ ಹಲವು ರಾಜ್ಯಗಳ ವಿಧಾನಸಭೆಗಳನ್ನು ಅವಧಿಪೂರ್ವದಲ್ಲೇ ವಿಸರ್ಜನೆ ಮಾಡಲಾಯಿತು ಮತ್ತು 1970ರಲ್ಲಿ 4ನೇ ಲೋಕಸಭೆಯನ್ನು ಅವಧಿಪೂರ್ವದಲ್ಲೇ ವಿಸರ್ಜನೆ ಮಾಡಲಾಯಿತು. ಇದರಿಂದಾಗಿ ಕೆಲವು ರಾಜ್ಯಗಳ ವಿಧಾನಸಭೆಗಳ ವೇಳಾಪಟ್ಟಿಯಲ್ಲಿ ಏರುಪೇರಾಗಿ ಏಕಕಾಲದ ಚುನಾವಣಾ ಪ್ರಕ್ರಿಯೆಗೆ ತೆರೆ ಬಿದ್ದಿತು.
1967ರ ನಂತರ ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಬಲರಾಗಿದ್ದ ಬಹಳಷ್ಟು ಜನ ಪ್ರಾದೇಶಿಕ ನಾಯಕರುಗಳು ನಾನಾ ಕಾರಣಗಳಿಂದಾಗಿ ರಾಷ್ಟ್ರೀಯ ಪಕ್ಷಗಳ ಮುಖ್ಯವಾಹಿನಿಯಿಂದ ದೂರವಾಗಿ ಜಾತಿ, ಮತ, ಪ್ರದೇಶ, ಕುಟುಂಬ, ಸ್ವಾಭಿಮಾನ, ಪ್ರತೀಷ್ಠೆ, ಪ್ರಾದೇಶಿಕ ಕಾರಣಗಳಿಂದಾಗಿ ತಮ್ಮದೇ ಆದ ಪಕ್ಷ/ಸಂಘಟನೆ ಕಟ್ಟಿದರು ಮತ್ತು ಅನೇಕರು ಅದರಲ್ಲಿ ಯಶಸ್ವಿಯೂ ಆದರು. ಇದರ ಜೊತೆಗೆ ಶ್ರೀಮತಿ ಇಂದಿರಾಗಾಂಧಿಯವರು ಭಾರತದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್ಸೇತರ ಸರ್ಕಾರಗಳನ್ನು ವಜಾ ಮಾಡಲಾಯಿತು. ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂದ ಜನತಾ ಸರ್ಕಾರ ಕೂಡ ಮುಖ್ಯಗೆ ಮುಖ್ಯ ಎಂಬಂತೆ ಹಲವು ರಾಜ್ಯಗಳ ಕಾಂಗ್ರೆಸ್ ಸರ್ಕಾರಗಳನ್ನು ವಜಾ ಮಾಡಿತು. ಇದರ ಒಟ್ಟು ಪರಿಣಾಮ ದೇಶದಲ್ಲಿ ಪದೇ ಚುನಾವಣೆ ನಡೆಯುವಂತಾಯಿತು.
ಪ್ರಮುಖ ಶಿಫಾರಸ್ಸುಗಳು
ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಭಾರತದ ಹಲವಾರು ಸಂಸ್ಥೆಗಳು ಕಾಲಕಾಲಕ್ಕನುಗುಣವಾಗಿ ತಮ್ಮದೇ ಆದ ಹಲವಾರು ಶಿಫಾರಸ್ಸುಗಳನ್ನು ಮಾಡಿವೆ. ಅವುಗಳೆಂದರೆ,
- 1967 – ಭಾರತದ ಚುನಾವಣೆ ಆಯೋಗ 1967ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಂಬಂಧ ಮೊದಲ ಬಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಆದರೆ ಕೇಂದ್ರ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಈ ಪ್ರಸ್ತಾಪ ನೆನೆಗುದಿಗೆ ಬಿದ್ದಿತು.
- 1983 – 1967ರ ಬಳಿಕ 1983ರಲ್ಲಿ ಅಂದರೆ 16 ವರ್ಷಗಳ ಬಳಿಕ ಭಾರತದ ಚುನಾವಣಾ ಆಯೋಗ ತನ್ನ ವಾರ್ಷಿಕ ವರದಿಯಲ್ಲಿ ಏಕಕಾಲದಲ್ಲಿ ಚುನಾವಣೆ ಬಗ್ಗೆ ಪ್ರಸ್ತಾಪಿಸಿತು. ಆದರೆ, ಕಾರಣಾಂತರಗಳಿಂದಾಗಿ ಈ ಪ್ರಸ್ತಾಪ ಕೂಡ ನೆನಗುದಿಗೆ ಬಿದ್ದಿತು.
- 1999 – 1999ರಲ್ಲಿ ಕಾನೂನು ಆಯೋಗ ವರದಿಯಲ್ಲಿ ಕೂಡ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲಾಯಿತು.
- 2017- ನೀತಿ ಆಯೋಗ 2017ರಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಸಲಹಾ ಪತ್ರಿಕೆಯನ್ನು ಸಿದ್ಧಪಡಿಸಿತ್ತು.
- 2018 – ಭಾರತದ ಕಾನೂನು ಆಯೋಗ 2018ರ ಆಗಸ್ಟ್ನಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳು ಇರುವ ಸಲಹೆಗಳನ್ನು ಸೂಚಿಸಿದೆ.
ಸರ್ವ ಪಕ್ಷಗಳ ಸಭೆ
ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಒಂದು ದೇಶ, ಒಂದೇ ಚುನಾವಣೆ ಪ್ರಸ್ತಾವದ ಬಗ್ಗೆ ಚರ್ಚಿಸಲು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 2019 ಜೂನ್ 19ರಂದು ನವದೆಹಲಿಯಲ್ಲಿ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಿದ್ದರು. ಈ ಸಭೆಗೆ ದೇಶದ 40 ಪ್ರಮುಖ ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಲಾಗಿತ್ತು. ಆಹ್ವಾನ ನೀಡಿದ 40 ಪಕ್ಷಗಳಲ್ಲಿ 21 ಪಕ್ಷಗಳು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದವು ಮತ್ತು 3 ಪಕ್ಷಗಳು ತಮ್ಮ ಪಕ್ಷದ ಪ್ರತಿನಿಧಿಗಳನ್ನು ಸಭೆಗೆ ಕಳುಹಿಸಿದ್ದವು. ಉಳಿದ 17 ಪಕ್ಷಗಳು ಸಭೆಗೆ ಗೈರಾಗಿದ್ದವು. ಈ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಪ್ರಾಥಮಿಕವಾಗಿ ಚರ್ಚಿಸಿದ ಪ್ರಧಾನಿಯವರು ಸರ್ಕಾರ ಇಟ್ಟಿರುವ ಹೆಜ್ಜೆಯ ಕುರಿತು ವಿವರಿಸಿ ಎಲ್ಲಾ ಪಕ್ಷಗಳ ನಾಯಕರ ಸಮ್ಮತಿ ಪಡೆಯುವ ಪ್ರಯತ್ನ ಮಾಡಿದರು. ಸಭೆಯಲ್ಲಿ ಬಹುತೇಕ ರಾಜಕೀಯ ಪಕ್ಷಗಳು ಏಕ ಚುನಾವಣಾ ಬಗ್ಗೆ ಪರ ಅಭಿಪ್ರಾಯ ವ್ಯಕ್ತಪಡಿಸಿದರೂ ಕೂಡ ವಿರೋಧದ ಧ್ವನಿಯೂ ಕೂಡ ಪ್ರತಿಧ್ವನಿಸಿತು. ಅಂತಿಮವಾಗಿ ಯೋಜನೆ ಜಾರಿ ಕುರಿತು ಕಾಲಮಿತಿಯಲ್ಲಿ ಶಿಫಾರಸ್ಸುಗಳನ್ನು ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಮಿತಿಯು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ತನ್ನ ವರದಿಯನ್ನು ಸಲ್ಲಿಸಲಿದೆ.
ಕಾರ್ಯಸಾಧ್ಯತೆಯಲ್ಲಿನ ಸವಾಲುಗಳು
- ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡೆಸಲು ಸಂವಿಧಾನ ತಿದ್ದುಪಡಿ ಹಾಗೂ ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ.
- ಚುನಾವಣೆಯಲ್ಲಿ ಆಯ್ಕೆಯಾದ ಅಧಿಕಾರದಲ್ಲಿರುವ ಸರ್ಕಾರ ಬಹುಮತನ್ನು ಕಳೆದುಕೊಂಡಾಗ ಪರ್ಯಾಯ ಸರ್ಕಾರ ರಚಿಸಲು ಇತರೆ ಪಕ್ಷ/ಪಕ್ಷಗಳ ಒಕ್ಕೂಟಕ್ಕೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದಲ್ಲಿ ಸರ್ಕಾರದ ಅವಧಿಯನ್ನು ಮೊಟಕುಗೊಳಿಸಬೇಕೆ? ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕೆ ಎಂಬ ಪ್ರಶ್ನೆ ಮೂಡುತ್ತದೆ. ಒಂದು ವೇಳೆ ಹೀಗೆ ಅಧಿಕಾರ ಮೊಟಕು ಮಾಡುವುದಾಗಲೀ, ರಾಷ್ಟ್ರಪತಿ ಆಳ್ವಿಕೆ ಹೇರುವುದಾಗಲೀ ಮಾಡಿದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಪ್ರಬಲವಾಗಿ, ರಾಜ್ಯ ಸರ್ಕಾರಗಳು ದುರ್ಬಲವಾಗುತ್ತವೆ ಎಂಬ ವಾದಕ್ಕೆ ಪುಷ್ಠಿ ನೀಡಿದಂತಾಗುತ್ತದೆ. ಒಂದು ವೇಳೆ ಈ ರೀತಿಯ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ಚುನಾವಣೆಯವರೆಗೆ ಉಳಿದ ಅಧಿಕಾರಾವಧಿ ನಿರ್ವಹಣೆ ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗುತ್ತವೆ.
- ಏಕಕಾಲೀನ ಚುನಾವಣೆಗಳನ್ನು ನಡೆಸಲು ಅಗತ್ಯವಿರುವ ಸಿಬ್ಬಂದಿ, ಹಣಕಾಸು, ಇವೇ ಮೊದಲಾದ ಮೂಲ ಸೌಕರ್ಯಗಳನ್ನು ಸಜ್ಜುಗೊಳಿಸುವ ಮತ್ತು ನಿರ್ಮಾಣ ಮಾಡುವ ಅಗತ್ಯವಿದೆ.
- ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮತ ಹಾಕುವಂತೆ ಮತದಾರರನ್ನು ಮಾನಸಿಕವಾಗಿ ತಯಾರಿ ಮಾಡಬೇಕಾಗುತ್ತದೆ. ಏಕೆಂದರೆ ಮತದಾರರಿಗೆ ವಿಧಾನಸಭೆಗೆ ತನ್ನ ಆಯ್ಕೆ ಬೇರೆ, ಲೋಕಸಭೆಗೆ ತನ್ನ ಆಯ್ಕೆ ಬೇರೆ ಇರುತ್ತದೆ.
- ಒಂದೇ ಕಾಲದಲ್ಲಿ ಎರಡೂ ಚುನಾವಣೆಗಳಿಗೆ ಮತ ಹಾಕಬೇಕಾದರೆ ಮಾಡಬೇಕು. ಅಷ್ಟು ವ್ಯವಧಾನ ಹಾಗೂ ಮಾನಸಿಕ ಸಿದ್ಧತೆಯೂ ಆಗಬೇಕಾಗುತ್ತದೆ.
- ದೇಶದಲ್ಲಿ ಏಕಕಾಲೀನ ಚುನಾವಣಾ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳ ಆರೋಗ್ಯಕರ ಚರ್ಚೆ ನಡೆದು ಒಮ್ಮತ ಮೂಡುವ ಅಗತ್ಯವಿದೆ. ಏಕೆಂದರೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು ಸೇರಿದಾಗ ಮಾತ್ರ ಒಂದು ಪ್ರಜಾಪ್ರಭುತ್ವ ಪರಿಪೂರ್ಣ ಎನಿಸಿಕೊಳ್ಳಲು ಸಾಧ್ಯ.
- ‘ಒಂದು ದೇಶ-ಒಂದು ಚುನಾವಣೆ’ ಎಂಬ ಘೋಷಣೆ ಎಂಬುದು ಮೇಲ್ನೋಟಕ್ಕೆ ಆಕರ್ಷಣೀಯವಾಗಿದೆ. ಆದರೆ, 1 ಧರ್ಮಗಳು, 6452 ಜಾತಿಗಳು, 52 ಬುಡಕಟ್ಟುಗಳು, 1618 ಭಾಷೆಗಳು, 29 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳು, 600ಕ್ಕೂ ಹೆಚ್ಚು ಜಿಲ್ಲೆಗಳು, 56800 ಹಳ್ಳಿಗಳನ್ನು ಹೊಂದಿರುವ ಈ ಬೃಹತ್ ವೈವಿಧ್ಯಮಯ ರಾಷ್ಟ್ರದಲ್ಲಿ ವಾಸ್ತವಿಕವಾಗಿ ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ.
- ಭಾರತದ ಒಕ್ಕೂಟ ವ್ಯವಸ್ಥೆ, ದೇಶದ ಏಕತೆ, ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆಯಾಗದಂತೆ ಕಾನೂನು ರಚಿಸುವ ಅಗತ್ಯವಿದೆ.
ಅನುಕೂಲತೆಗಳು
1) ಒಂದೇ ಬಾರಿ ಲೋಕಸಭೆ & ವಿಧಾನಸಭೆಗಳಿಗೆ ಚುನಾವಣೆ ನಡೆಸಿದರೆ, ಮಾನವ ಶ್ರಮ, ಸಮಯ ಮತ್ತು ಭಾರೀ ಮೊತ್ತದ ಹಣ ಉಳಿತಾಯವಾಗುತ್ತದೆ.
2) ಮೂಲಸೌಕರ್ಯ, ಸಿಬ್ಬಂದಿ, ರಕ್ಷಣಾ ವೆಚ್ಚ ಮತ್ತು ಎಣಿಕೆ ಎಲ್ಲದರಲ್ಲೂ ದೇಶದ ಆರ್ಥಿಕತೆಗೆ ಹೆಚ್ಚಿನ ಹೊರೆ ಬೀಳುವುದಿಲ್ಲ.
3) ರಾಜಕೀಯ ಬಲಾಬಲಗಳು ಹಾಗೂ ಲೆಕ್ಕಾಚಾರಗಳು ಮತ್ತೆ ಮತ್ತೆ ಏರು ಪೇರಾಗುವ, ಅದರಿಂದ ರಾಜಕೀಯ ಸ್ಥಿತಿಗತಿಗಳು ಬದಲಾಗಿ ಅತಂತ್ರತೆ ತಲೆದೂರುವ ಸನ್ನಿವೇಶ ಇರುವುದಿಲ್ಲ.
4) ಏಕಕಾಲಕ್ಕೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಪ್ರಾದೇಶಿಕವಾಗಿಯೂ, ರಾಷ್ಟ್ರೀಯ ನೆಲೆಯಲ್ಲೂ ಮತದಾರನ ಒಲವನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ರಾಜಕೀಯ ಪಕ್ಷಗಳಿಗೆ ಏಕಕಾಲದಲ್ಲಿ ಬರುವುದರಿಂದ ತಮ್ಮ ನಿಲುವು ಹಾಗೂ ಸಮೀಕರಣಗಳಲ್ಲಿ ಮೂಲಭೂತವಾಗಿ ಜನಸ್ನೇಹಿಯಾದ ಸ್ವರೂಪವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.
5) ನಮ್ಮ ದೇಶದ ಪ್ರತಿಯೊಂದು ಪ್ರಾಂತ್ಯದ ಮತದಾರನ ಒಲವು-ನಿಲುವುಗಳ ಬೇರೆ ಬೇರೆಯಾಗಿರುವುದರಿಂದ ಏಕಪಕ್ಷದ ಸರ್ವಾಧಿಕಾರ ಬರಬಹುದು ಎಂಬ ಆತಂಕಕ್ಕೆ ಆಸ್ಪದವಿರುವುದಿಲ್ಲ.
ಒಂದು ದೇಶ-ಒಂದು ಚುನಾವಣೆಯ ಅನಾನುಕೂಲತೆಗಳು(ವಿರೋಧಪಕ್ಷಗಳ ವಾದ)
1) ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸಿದರೆ ಚುನಾವಣಾ ಅಕ್ರಮಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
2) ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಸಿಬ್ಬಂದಿಗಳ ಕೊರತೆಯಾಗಬಹುದು.
3) ಪಾರದರ್ಶಕತೆ ಸಾಧ್ಯವಾಗದಿರಬಹುದು.
4) ಭಾರತದ ಒಕ್ಕೂಟ ವ್ಯವಸ್ಥೆಯ ಮೂಲಸ್ವರೂಪಕ್ಕೆ ಧಕ್ಕೆಯಾಗಲಿದೆ.
5) ಆಯಾ ರಾಜ್ಯಗಳ ಪ್ರಾದೇಶಿಕತೆ, ಸ್ವಾಭಿಮಾನ ಮತ್ತು ಆಸ್ಮಿತೆಗೆ ಧಕ್ಕೆಯುಂಟಾಗಲಿದೆ.
6) ಸಂವಿಧಾನದ ಮೂಲ ತತ್ವ ಮತ್ತು ಆಶಯಗಳಿಗೆ ವಿರುದ್ಧವಾದುದು.
7) ಒಂದು ದೇಶ-ಒಂದು ಚುನಾವಣೆ ಪ್ರಜಾಸತ್ತಾತ್ಮಕ ಕ್ರಮವಲ್ಲ
8) ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಪ್ರಬಲವಾಗಿ, ರಾಜ್ಯ ಸರ್ಕಾರಗಳು ದುರ್ಬಲವಾಗುತ್ತವೆ.
9) .ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳು ಮಿಶ್ರಣಗೊಳ್ಳುತ್ತವೆ ಅಲ್ಲದೆ ಪ್ರಾದೇಶಿಕ ಸಮಸ್ಯೆ/ವಿಷಯಗಳಿಗೆ ಮಾನ್ಯತೆ ದೊರೆಯುವುದಿಲ್ಲ.
10) ಏಕಕಾಲಕ್ಕೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಿಗೆ ಒಪ್ಪಿಗೆಯಾಗುವಂತೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದಂತೆ ಮತ್ತು ಭಾರತದ ಬಹುತ್ವದ ಸಂಸ್ಕಡಿಯನ್ನು ಗಮನದಲ್ಲಿಟ್ಟುಕೊಂಡು ಕಾನೂನು ರಚನೆ ಮಾಡುವುದು ಅತ್ಯಂತ ಕ್ಲಿಷ್ಟಕರವಾದುದು.
ಉಪಸಂಹಾರ
ಒಟ್ಟಾರೆಯಾಗಿ ಹೇಳುವುದಾದರೆ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪ: ಮತ್ತೆ ಮುನ್ನಲೆಗೆ ಬಂದಿದೆ ಆದರೆ, ಇದು ಅಷ್ಟು ಸುಲಭದಲ್ಲಿ ಜಾರಿಗೊಳಿಸಬಹುದಾದ ಯೋಜನೆಯಲ್ಲ. ಹಾಗಂತ ಕಾರ್ಯಸಾಧುವಲ್ಲದ ಪ್ರಸ್ತಾವನೆಯೂ ಅಲ್ಲ. ಒಂದು ದೇಶ, ಒಂದು ಚುನಾವಣೆ ಎಂಬ ಪರಿಕಲ್ಪನೆ ಜಾರಿಗೆ ಪೂರ್ವದಲ್ಲಿ ಎಲ್ಲಾ ಪಕ್ಷಗಳ ನಡುವೆ ಒಂದು ಸಹಮತ ಏರ್ಪಡಬೇಕಿದೆ. ಅದಾದ ನಂತರ ಸೂಕ್ತ ಕಾನೂನು ತಿದ್ದುಪಡಿಗೆ ಒಪ್ಪಿಗೆಯ ಮುದ್ರೆ ಬೀಳಬೇಕಿದೆ. ಆದ್ದರಿಂದ ಆಡಳಿತ ಪಕ್ಷ ಮತ್ತು ಪ್ರತಿಭೆಗಳು ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಇರುವ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ತಮ್ಮ ಪ್ರತಿಭೆಯನ್ನು ಬದಿಗಿಟ್ಟು ಉದಾತ್ತ ನಿಲುವು ತಾಳಿದರೆ ಹುಬ್ಬೇರಿಸುವಂಥ ಮತ್ತು ಮಾದರಿಯಾಗಬಲ್ಲ ಯೋಜನೆ ಜಾರಿ ಕಷ್ಟದ ಕೆಲಸವಲ್ಲ, ಆ ನಿಟ್ಟಿನಲ್ಲಿ ಸಂಬಂಧಪಟ್ಟವರೆಲ್ಲರೂ ಆಯೋಜನೆ ಮಾಡುವ ಅವಶ್ಯಕತೆಯಿದೆ.