ಭಾರತದಲ್ಲಿ ಜನಸಂಖ್ಯಾ ಸ್ಫೋಟ
ಭಾರತದಲ್ಲಿ ಜನಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದ್ದು, ಭಾರತದ ಆರ್ಥಿಕತೆಯ ಮೇಲೆ ತನ್ನದೇ ಆದ ಪರಿಣಾಮವನ್ನು ತರುತ್ತಿದೆ. ಭಾರತ ಇಂದು ಎದುರಿಸುತ್ತಿರುವ ಅನೇಕ ಗಂಭೀರ ಸಮಸ್ಯೆಗಳಿಗೆ ಜನಸಂಖ್ಯೆಯು ಪ್ರಮುಖ ಕಾರಣವಾಗಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಚೀನಾ ಮೊದಲನೆಯ ಸ್ಥಾನ ಪಡೆದರೆ ಭಾರತ ಎರಡನೆಯ ನವನ್ನು ಪಡೆದಿದೆ. 2021ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 140 ಕೋಟಿಗಳಿಗಿಂತಲೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಜನಸಂಖ್ಯಾ ಬೆಳವಣಿಗೆ ಮತ್ತು ಜನಸಂಖ್ಯಾ ಸ್ಫೋಟದ ಬಗ್ಗೆ ಒಂದು ಅವಲೋಕನ ಇಲ್ಲಿದೆ. ಜನಸಂಖ್ಯಾ ಸ್ಫೋಟ
ಯಾವುದೇ ಒಂದು ದೇಶದಲ್ಲಿ ಹೆಚ್ಚು ಜನಸಂಖ್ಯೆ ಇದ್ದ ಮಾತ್ರಕ್ಕೆ ಆ ದೇಶದಲ್ಲಿ ಜನಸಂಖ್ಯೆ ಮಿತಿಮೀರಿ ಬೆಳೆದಿದ ಎಂದು ಹೇಳಲು ಸಾಧ್ಯವಿಲ್ಲ. ಒಂದು ದೇಶದ ಭೂಪ್ರದೇಶ, ಸಂಪನ್ಮೂಲ ಮತ್ತು ಅವುಗಳ ಬಳಕೆಯ ಆಧಾರದ ಮೇಲೆ ಒಂದು ದೇಶದಲ್ಲಿ ಜನಸಂಖ್ಯೆ ಮಿತಿ ಮೀರಿ ಬೆಳೆದಿದೆಯೇ, ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಯಾವ ದೇಶದಲ್ಲಿ ಜನಸಂಖ್ಯೆಯು ಆರ್ಥಿಕಾಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆಯೋ ಆ ದೇಶ ಜನಸಂಖ್ಯಾ ಸ್ಫೋಟದ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಜನಸಂಖ್ಯೆ ಮತ್ತು ಆರ್ಥಿಕಾಭಿವೃದ್ಧಿಗೆ ಒಂದಕ್ಕೊಂದು ಸಂಬಂಧವಿದ್ದು ಅತಿಯಾದ ಜನಸಂಖ್ಯಾ ಬೆಳವಣಿಗೆಯು ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ರಾಷ್ಟ್ರೀಯ ಆದಾಯ ಮತ್ತು ತಲಾದಾಯಗಳು ದೊಡ್ಡ ಜನಸಂಖ್ಯೆಯ ನಡುವೆ ಹಂಚಲ್ಪಟ್ಟು ತಲಾದಾಯ ಕಡಿಮೆಯಾಗುತ್ತದೆ ಮತ್ತು ಜನರ ಜೀವನಮಟ್ಟ ಕುಸಿಯುತ್ತದೆ.
ಭಾರತದಲ್ಲಿ ಜನಸಂಖ್ಯೆ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಚೀನಾ ಮೊದಲನೆಯ ಸ್ಥಾನ ಪಡೆದರೆ ಭಾರತ ಎರಡನೆಯ ಸ್ಥಾನವನ್ನು ಪಡೆದಿದೆ. ಜಗತ್ತಿನಲ್ಲಿ ಶೇ.2.4 ರಷ್ಟು ಭೂಪ್ರದೇಶವನ್ನು ಹೊಂದುವ ಮೂಲಕ ವಿಸ್ತೀರ್ಣದಲ್ಲಿ 7ನೆಯ ಸ್ಥಾನವನ್ನು ಪಡೆದಿರುವ ಭಾರತ ಜನಸಂಖ್ಯೆಯಲ್ಲಿ ಮಾತ್ರ ಶೇ.17.05 ರಷ್ಟು ಪಾಲನ್ನು ಹೊಂದುವ ಮೂಲಕ ವಿಶ್ವದಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆ. ಜಗತ್ತಿನಲ್ಲಿರುವ ಪ್ರತಿ ಏಳು ಜನ ವ್ಯಕ್ತಿಗಳಲ್ಲಿ ಒಬ್ಬ ಭಾರತೀಯನಿದ್ದಾನೆ. ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ ಜನಿಸುವ ಒಟ್ಟು ಮಕ್ಕಳಲ್ಲಿ 40 ಮಕ್ಕಳು ಭಾರತದವಾಗಿವೆ. ಭಾರತದಲ್ಲಿ ಪ್ರತಿ ಒಂದೂವರೆ ಸೆಕೆಂಡಿಗೆ ಒಂದು ಮಗು, ಒಂದು ನಿಮಿಷಕ್ಕೆ 40 ಮಕ್ಕಳು, ಪ್ರತಿ ಗಂಟೆಗೆ 2400 ಮಕ್ಕಳಂತೆ ಒಂದು ದಿನಕ್ಕೆ 57,600 ಮಕ್ಕಳು ಹಾಗೂ ವರ್ಷಕ್ಕೆ 2,10,24,000 ಮಕ್ಕಳು ಜನಿಸುತ್ತಿದ್ದಾರೆ. ಇದರಿಂದಾಗಿ ಭಾರತದ ಜನಸಂಖ್ಯೆಯು ಅಮೆರಿಕ, ಜಪಾನ್, ಬ್ರೆಜಿಲ್, ಪಾಕಿಸ್ತಾನ, ಇಂಡೋನೇಷ್ಯಾ ಬಾಂಗ್ಲಾದೇಶಗಳ ಜನಸಂಖ್ಯೆಗೆ ಸಮವಾಗಿದೆ. ಭಾರತ ಪ್ರತಿ ಒಂದೂವರೆ ವರ್ಷಕ್ಕೆ ಒಂದು ಆಸ್ಟ್ರೇಲಿಯಾವನ್ನು, ನಾಲ್ಕು ವರ್ಷಕ್ಕೆ ಒಂದು ಇಂಗ್ಲೆಂಡ್ನ್ನು, 10 ವರ್ಷಕ್ಕೆ ಒಂದು ಬ್ರೆಜಿಲ್ನ್ನು ಸೃಷ್ಟಿಸುತ್ತಿದೆ. ಇದು ಹೀಗೆಯೇ ಮುಂದುವರೆಯುತ್ತಾ ಹೋದರೆ 2035 ರ ವೇಳೆಗೆ ಭಾರತ ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕಿ ಮೊದಲನೆಯ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ.
ಭಾರತದಲ್ಲಿ ಜನಸಂಖ್ಯಾ ಬೆಳವಣಿಗೆ
ಭಾರತದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತದೆ. 1901ರ ಜನಗಣತಿಯ ಪ್ರಕಾರ 23.6 ಕೋಟಿ ಗಳಿಷ್ಟಿದ್ದ ಭಾರತದ ಜನಸಂಖ್ಯೆ 2011ರ ವೇಳೆಗೆ 121 ಕೋಟಿ ತಲುಪಿದೆ. ಭಾರತದಲ್ಲಿ ಜನಸಂಖ್ಯಾ ಬೆಳವಣಿಗೆಯು ನಿಗಧಿತ ದರದಲ್ಲಿ ಬೆಳವಣಿಗೆಯಾಗಿಲ್ಲ. 1901 ರಿಂದ 2011ರ ನಡುವಿನ 110 ವರ್ಷಗಳ ಕಾಲಾವಧಿಯಲ್ಲಿ ವಿವಿಧ ದರದಲ್ಲಿ ಜನಸಂಖ್ಯೆ ಬೆಳವಣಿಗೆಯಾಗುತ್ತಾ ಬಂದಿದೆ. 1901 ರಿಂದ 1911 ರ ನಡುವೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದ ಜನಸಂಖ್ಯಾ ಬೆಳವಣಿಗೆ 1911 ರಿಂದ 1921ರ ನಡುವಿನ ಅವಧಿಯಲ್ಲಿ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿತು. ಆದರೆ, 1921 ರ ನಂತರ ಭಾರತದಲ್ಲಿನ ಜನಸಂಖ್ಯಾ ಬೆಳವಣಿಗೆ ಏರುಗತಿಯಲ್ಲಿ ಸಾಗುತ್ತಾ ಹೋಯಿತು. ಆದ್ದರಿಂದಲೇ ಜನಸಂಖ್ಯಾ ಬೆಳವಣಿಗೆಯ ದೃಷ್ಟಿಯಿಂದ 1921 ನ್ನು ಮಹಾ ಇಬ್ಬಾಗದ ವರ್ಷ ಎಂದು ಕರೆಯುತ್ತಾರೆ. 1921 ರಿಂದ 1951 ರ ನಡುವಿನ ಅವಧಿಯಲ್ಲಿ ಜನಸಂಖ್ಯೆಯ ವಾರ್ಷಿಕ ಬೆಳವಣಿಗೆಯು ಶೇ. 1 ರಿಂದ 1.35 ರಷ್ಟಿತ್ತು. 1951ರ ನಂತರ ಅತ್ಯಂತ ವೇಗವಾಗಿ ಬೆಳೆಯುತ್ತಾ ಹೋದ ಭಾರತದ ಜನಸಂಖ್ಯೆಯು 2001ರ ವೇಳೆಗೆ 102.86 ಕೋಟಿ ತಲುಪಿದರೆ 2011ರ ವೇಳೆಗೆ 121 ಕೋಟಿಯನ್ನು ತಲುಪಿದೆ, ಇದು ಹೀಗೆಯೇ ಬೆಳೆಯುತ್ತಾ ಹೋದರೆ ಭಾರತದ ಜನಸಂಖ್ಯೆ 2060ರ ವೇಳೆಗೆ 170 ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿದೆ
ಭಾರತದಲ್ಲಿ ಜನಸಂಖ್ಯಾ ಸ್ಫೋಟ
- 2011 ರ ಜನಗಣತಿಯ ಪ್ರಕಾರ ಭಾರತ 121 ಕೋಟಿ ಜನಸಂಖ್ಯೆಯನ್ನು ಹೊಂದಿದೆ.
- ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಪಡೆದಿದೆ.
- ವಿಶ್ವದ ಜನಸಂಖ್ಯೆಯಲ್ಲಿ ಶೇ.17.48 ರಷ್ಟು ಪಾಲನ್ನು ಹೊಂದಿದೆ.
- 2011ರ ಜನಗಣತಿ ಪ್ರಕಾರ 1,21,01,93,422 ಜನಸಂಖ್ಯೆಯನ್ನು ಹೊಂದಿದೆ.
- ಮಹಿಳೆಯರು – 62,3 ಕೋಟಿ
- ಮರುಷರು – 68.6 ಕೋಟಿ
- ಲಿಂಗಾನುಪಾತ – 940 ಜನಸಾಂದ್ರತೆ – 382
- ಸಾಕ್ಷರತಾ ಪ್ರಮಾಣ – ಶೇ.74%
- ಪುರುಷ ಸಾಕ್ಷರತೆ – ಶೇ.82%
- ಮಹಿಳಾ ಸಾಕ್ಷರತೆ – ಶೇ.75%
- ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ – ಉತ್ತರ ಪ್ರದೇಶ (199,581,477)
- ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ – ಸಿಕ್ಕಿಂ (607,688)
- ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ – ಬಿಹಾರ (102)
- ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ – ಅರುಣಾಚಲ ಪ್ರದೇಶ (17)
- ಅತಿ ಹೆಚ್ಚು ಮಹಿಳೆಯರನ್ನು ಹೊಂದಿರುವ ರಾಜ್ಯ – ಕೇರಳ (1084)
- ಅತಿ ಕಡಿಮೆ ಮಹಿಳೆಯರನ್ನು ಹೊಂದಿರುವ ರಾಜ್ಯ – ಹರಿಯಾಣಿ (877)
- ಅತಿ ಹೆಚ್ಚು ಜನಸಂಖ್ಯೆ ಕೇಂದ್ರಾಡಳಿತ ಪ್ರದೇಶ – ದೆಹಲಿ (16753235)
- ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ – ಲಕ್ಷದ್ವೀಪ (64429)
- ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ – ದೆಹಲಿ (1297)
- ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ – ಅಂಡಮಾನ್ ಮತ್ತು ನಿಕೋಬಾರ್ (46)
- ಹೆಚ್ಚು ಮಹಿಳೆಯರನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ – ಪಾಂಡಿಚೇರಿ (1038)
- ಕಡಿಮೆ ಮಹಿಳೆಯರನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ – ದಿಯು ಮತ್ತು ದಾಮನ್ (618)
- ಭಾರತದಲ್ಲಿ 20 ರಾಜ್ಯಗಳು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿವೆ.
- ಭಾರತದಲ್ಲಿ 5 ರಾಜ್ಯಗಳು ಎರಡು ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿವೆ.
ಜನಸಂಖ್ಯಾ ಬೆಳವಣಿಗೆಯ ಲಕ್ಷಣಗಳು
ಭಾರತದಲ್ಲಿನ ಜನಸಂಖ್ಯಾ ಬೆಳವಣಿಗೆಯು ತನ್ನದೇ ಆದ ಅನೇಕ ಲಕ್ಷಣಗಳನ್ನು ಒಳಗೊಂಡಿದ್ದು ಅವುಗಳನ್ನು ಈ ಕೆಳಕಂಡಂತೆ ಕಾಣಬಹುದು.
ಏರುಗತಿಯ ಬೆಳವಣಿಗೆಯ ದರ – ಭಾರತದಲ್ಲಿನ ಜನಸಂಖ್ಯಾ ಬೆಳವಣಿಗೆಯ ದರ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. 1921 ರಿಂದ 1951ರ ನಡುವಿನ ಅವಧಿಯಲ್ಲಿ ವಾರ್ಷಿಕ ಸರಾಸರಿ ಶೇ.1.5 ರಷ್ಟಿದ್ದ ಬೆಳವಣಿಗೆ ದರ 2011ರ ವೇಳೆಗೆ 1.76 ಕ್ಕೆ ತಲುಪಿದೆ. ಇದರಿಂದಾಗಿ ಪ್ರತಿ ವರ್ಷ ಭಾರತದಲ್ಲಿ 1.8 ಕೋಟಿಯಷ್ಟು ಜನಸಂಖ್ಯೆ ಸೃಷ್ಟಿಯಾಗುತ್ತಿದೆ.
ಅಧಿಕ ಜನನ ಪ್ರಮಾಣ ಮತ್ತು ಕಡಿಮೆ ಮರಣ ಪ್ರಮಾಣ – ಭಾರತದಲ್ಲಿ ಜನನ ಪ್ರಮಾಣ ಮತ್ತು ಮರಣ ಪ್ರಮಾಣದ ನಡುವೆ ಸಾಕಷ್ಟು ವ್ಯತ್ಯಾಸವಿದೆ. 2011 ರ ಜನಗಣತಿಯ ಪ್ರಕಾರ ಪ್ರತಿ ಸಾವಿರಕ್ಕೆ 22.1 ರಷ್ಟು ಜನನ ಪ್ರಮಾಣವಿದ್ದರೆ 1.2 ರಷ್ಟು ಮರಣ ಪ್ರಮಾಣ ಇದೆ. ಇದರಿಂದಾಗಿ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಾ ಸಾಗಿದೆ.
ಪ್ರದೇಶವಾರು ಜನಸಂಖ್ಯೆಯಲ್ಲಿ ವ್ಯತ್ಯಾಸ – ಭಾರತದಲ್ಲಿ 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳಿದ್ದು, ಈ ಎಲ್ಲಾ ರಾಜ್ಯಗಳ ನಡುವೆ ಜನಸಂಖ್ಯೆ ಸಮನಾಗಿ ಹಂಚಿಕೆಯಾಗಿಲ್ಲ. ಉದಾಹರಣೆಗೆ ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಎನಿಸಿಕೊಂಡಿರುವ ರಾಜಸ್ಥಾನ 6.86 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು ಎಂಟನೇ ಸ್ಥಾನದಲ್ಲಿದೆ. ಭೂ ವಿಸ್ತೀರ್ಣದಲ್ಲಿ 5ನೇ ಸ್ಥಾನ ಪಡೆದಿರುವ ಉತ್ತರ ಪ್ರದೇಶ 19.96 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಎಂದೆನಿಸಿಕೊಂಡಿದೆ. ಹೀಗೆ ಭಾರತದಲ್ಲಿ ಜನಸಂಖ್ಯೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಸಮನಾಗಿ ಹಂಚಲ್ಪಟ್ಟಿಲ್ಲ.
ಜೀವನ ನಿರೀಕ್ಷೆ – ಜನರು ಎಷ್ಟು ಕಾಲ ಬದುಕುತ್ತಾರೆಂಬುದನ್ನು ಅಂದಾಜು ಮಾಡುವುದನ್ನು ಜೀವನ ನಿರೀಕ್ಷೆ ಎಂದು ಕರೆಯುತ್ತಾರೆ. ಈ ಜೀವನ ನಿರೀಕ್ಷೆಯ ಪ್ರಮಾಣ ದಿನದಿಂದ ದಿನಕ್ಕೆ ವ್ಯತ್ಯಾಸವಾಗುತ್ತಾ ಸಾಗುತ್ತಿದೆ. 1911ರ ವೇಳೆಗೆ 23 ವರ್ಷವಿದ್ದ ಜೀವನ ನಿರೀಕ್ಷೆ ಪ್ರಮಾಣ 2011ರ ವೇಳೆಗೆ 62.6ಕ್ಕೆ ತಲುಪಿದೆ ಮತ್ತು ಸ್ತ್ರೀಯರ ಜೀವನ ನಿರೀಕ್ಷೆ ಪ್ರಮಾಣ.
ಲಿಂಗಾನುಪಾತ – ಒಂದು ದೇಶದ ಪುರುಷ ಮತ್ತು ಸ್ತ್ರೀಯರ ನಡುವಿನ ಅನುಪಾತವನ್ನು ಲಿಂಗಾನುಪಾತ ಎಂದು ಕರೆಯುತ್ತಾರೆ. ಭಾರತದಲ್ಲಿ ಲಿಂಗಾನುಪಾತದ ಪ್ರಮಾಣ ಕಾಲಕಾಲಕ್ಕೆ ವ್ಯತ್ಯಾಸವಾಗುತ್ತಾ ಸಾಗಿದೆ. 1901 ರಲ್ಲಿ 1000 ಪುರುಷರಿಗೆ 971 ಮಹಿಳೆಯರಿದ್ದರೆ 2011ರ ವೇಳೆಗೆ 1000ಕ್ಕೆ 940ಕ್ಕೆ ಇಳಿದಿದೆ. ಭಾರತದಲ್ಲಿ ಕೇರಳ ಮತ್ತು ಪಾಂಡಿಚೇರಿಗಳಲ್ಲಿ ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಹೆಚ್ಚಿದ್ದು ಬೇರೆ ರಾಜ್ಯಗಳಲ್ಲಿ ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಕಡಿಮೆ ಇದೆ.
ಜನಸಾಂದ್ರತೆ – ಒಂದು ಚದರ ಕಿಲೋಮೀಟರ್ ಭೂಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯೆಗೆ ಜನ ಸಾಂದ್ರತೆ ಎಂದು ಕರೆಯುತ್ತಾರೆ. ಭಾರತದಲ್ಲಿ ದಶಕದಿಂದ ದಶಕಕ್ಕೆ ಜನಸಾಂದ್ರತೆಯಲ್ಲಿ ವ್ಯತ್ಯಾಸವಾಗುತ್ತಾ ಹೋಗಿದ್ದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. 1901 ರಲ್ಲಿ ಪ್ರತಿ ಚದರ ಕಿ.ಮೀ.ಗೆ 77ರಷ್ಟಿದ್ದ ಜನಸಾಂದ್ರತೆ 2011 ರ ವೇಳೆಗೆ 382ಕ್ಕೆ ತಲುಪಿದೆ. ಬಿಹಾರ ರಾಜ್ಯ ಪ್ರತಿ ಚರದ ಕಿ.ಮೀ.ಗೆ 1102 ರಷ್ಟು ಜನಸಾಂದ್ರತೆಯನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿ ಪಶ್ಚಿಮ ಬಂಗಾಳ (1029) ಎರಡನೆಯ ಸ್ಥಾನ ಪಡೆದಿವೆ.
ಸಾಕ್ಷರತೆ ಪ್ರಮಾಣದಲ್ಲಿ ವ್ಯತ್ಯಾಸ – ಭಾರತದಲ್ಲಿ ದಶಕದಿಂದ ದಶಕಕ್ಕೆ ಸಾಕ್ಷರತೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತ ಹೋಗಿದೆ. 1901 ರ ವೇಳೆಗೆ ಶೇ.5.4 ರಷ್ಟಿದ್ದ ಭಾರತದ ಸಾಕ್ಷರತೆ 2011ರ ವೇಳೆಗೆ ಶೇ.74 ಕ್ಕೆ ತಲುಪಿದೆ, ಇದರಲ್ಲಿ ಸಾಕ್ಷರತೆ ಶೇ.65 ರಷ್ಟಿದ್ದರೆ, ಪುರುಷ ಸಾಕ್ಷರತೆ ಶೇ.82 ರಷ್ಟಿದೆ. ಶೇ.59.40 ರಷ್ಟು ಜನರು ಗ್ರಾಮಾಂತರ ಪ್ರದೇಶದಲ್ಲಿ ಸಾಕ್ಷರರಿದ್ದರೆ ನಗರ ಪ್ರದೇಶದಲ್ಲಿ ಶೇ.80.30 ರಷ್ಟು ಸಾಕ್ಷರರಿದ್ದಾರೆ. ಭಾರತದಲ್ಲಿ ಕೇರಳ ರಾಜ್ಯ ಅತಿ ಹೆಚ್ಚು ಸಾಕ್ಷರರನ್ನ ಹೊಂದಿರುವ ರಾಜ್ಯವಾದರೆ (ಶೇ.94), ಬಿಹಾರ ಅತಿ ಕಡಿಮೆ (ಶೇ.64) ಸಾಕ್ಷರರನ್ನು ಹೊಂದಿರುವ ರಾಜ್ಯವಾಗಿದೆ.
ಉದ್ಯೋಗ ಹಂಚಿಕೆ – ಭಾರತದಲ್ಲಿ ಉದ್ಯೋಗ ಹಂಚಿಕೆಯ ಪ್ರಮಾಣ ಎಲ್ಲಾ ಕ್ಷೇತ್ರಗಳಲ್ಲಿ ಏಕಪ್ರಮಾಣದಲ್ಲಿ ಹಂಚಿಕೆಯಾಗಿಲ್ಲ. ಭಾರತ ಇಂದಿಗೂ ಒಂದು ಕೃಷಿ ಪ್ರಧಾನ ದೇಶವಾಗಿದ್ದು ಶೇ.60 ಕ್ಕೂ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದ್ದು, ಶೇ.18 ರಷ್ಟು ಜನರು ಕೈಗಾರಿಕಾ ಕ್ಷೇತ್ರವನ್ನೂ, ಶೇ.24 ರಷ್ಟು ಜನರು ಸೇವಾವಲಯವನ್ನು ಅವಲಂಬಿಸಿದ್ದಾರೆ.
ಗ್ರಾಮೀಣ ಮತ್ತು ನಗರ ಪ್ರದೇಶದ ಜನಸಂಖ್ಯೆಯಲ್ಲಿ ವ್ಯತ್ಯಾಸ – ಭಾರತದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಜನಸಂಖ್ಯೆಯ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸವಿದೆ. 1901ರ ಜನಗಣತಿಯ ಪ್ರಕಾರ ಶೇ.89.2 ರಷ್ಟು ಜನರು (213 ದಶಲಕ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದರೆ ಶೇ.10.8 ರಷ್ಟು ಜನರು (25 ದಶಲಕ್ಷ) ನಗರ ಪ್ರದೇಶದಲ್ಲಿ ವಾಸವಾಗಿದ್ದರು. ಈ ಪ್ರಮಾಣ: ದಶಕದಿಂದ ದಶಕಕ್ಕೆ ವ್ಯತ್ಯಾಸವಾಗುತ್ತಾ ಬಂದಿದೆ. 2011ರ ಜನಗಣತಿಯ ಪ್ರಕಾರ ಶೇ.68.84 ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಶೇ.31.16 ರಷ್ಟು ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಜನಸಂಖ್ಯಾ ಬೆಳವಣಿಗೆಗೆ ಕಾರಣಗಳು
ಭಾರತದಲ್ಲಿ ದಿನೇ ದಿನೇ ಜನಸಂಖ್ಯೆ ಬೆಳೆಯುತ್ತಿರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳನ್ನು ಈ ಕೆಳಕಂಡಂತೆ ಕಾಣಬಹುದು.
ಕಡಿಮೆ ಮರಣ ಪ್ರಮಾಣ – ಭಾರತದಲ್ಲಿ ಸಾಂಕ್ರಾಮಿಕ ರೋಗಗಳ ಹತೋಟಿ, ಭೀಕರ ಬರಗಾಲಗಳ ನಿಯಂತ್ರಣ ಶಿಶು ಮರಣ ಪ್ರಮಾಣದಲ್ಲಿನ ಇಳಿಕೆ, ವೈದ್ಯಕೀಯ ಸೌಲಭ್ಯಗಳ ವಿಸ್ತರಣೆ, ಮುಂತಾದ ಕಾರಣಗಳಿಂದಾಗಿ ಮರಣ ಪ್ರಮಾಣ ದಶಕದಿಂದ ದಶಕಕ್ಕೆ ಕಡಿಮೆಯಾಗುತ್ತಾ ಬಂದಿದೆ. 1911ರ ವೇಳೆಗೆ ಸಾವಿರ ಜನಸಂಖ್ಯೆಗೆ ವಾರ್ಷಿಕ ಸರಾಸರಿ 12 ರಷ್ಟಿದ್ದ ಮರಣ ಪ್ರಮಾಣ 2011ರ ಜನಗಣತಿಯ ಪ್ರಕಾರ ಸಾವಿರಕ್ಕೆ 7.2 ಕೆ ಇಳಿದಿದೆ. ಇದರಿಂದಾಗಿ ಜನಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ಜನನ ಪ್ರಮಾಣದ ಏರಿಕೆ – ಭಾರತದಲ್ಲಿ ಜನನ ಪ್ರಮಾಣ ಮತ್ತು ಮರಣ ಪ್ರಮಾಣದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಸ್ವಾತಂತ್ರ್ಯಾ ನಂತರ ಜನನ ಮತ್ತು ಮರಣ ಪ್ರಮಾಣಗಳೆರಡೂ ಸಾಕಷ್ಟು ಪ್ರಮಾಣದಲ್ಲಿ ತಗ್ಗಿದ್ದರೂ ಅವುಗಳ ನಡುವಿನ ಅಂತರ ಹೆಚ್ಚುತ್ತಲೇ ಇದೆ. 1911ರಲ್ಲಿ ಸಾವಿರ ಜನಸಂಖ್ಯೆಗೆ ಜನನ ಪ್ರಮಾಣ 49.2 ಹಾಗೂ ಮರಣ ಪ್ರಮಾಣ 42.6 ಇದ್ದದ್ದು 2011ರ ವೇಳೆಗೆ 22.1 ಮತ್ತು 7.2ಕ್ಕೆ ಇಳಿದಿದೆ. ಈ ಅಂತರದಿಂದಾಗಿ ಜನಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಬಡತನ ಭಾರತದಲ್ಲಿ ಶೇ.30 ಕ್ಕಿಂತಲೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದು, ಅವರ ಜೀವನ ಮಟ್ಟ ತುಂಬಾ ಕಡಿಮೆ ಇದೆ. ಬಡ ಕುಟುಂಬಗಳಿಗೆ ಹೆಚ್ಚು ಮಕ್ಕಳನ್ನು ಪಡೆಯುವುದರಿಂದ ತಮ್ಮ ಜೀವನ ಮಟ್ಟ ಸುಧಾರಿಸುತ್ತದೆಂಬ ವ್ಯಾಪಕ ನಂಬಿಕೆ ಇದೆ. ಇದರಿಂದಾಗಿ ಬಡಕುಟಂಬಗಳು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯು ಮುಂದಾಗುವುದರಿಂದ ಜನಸಂಖ್ಯೆ ಹೆಚ್ಚುತ್ತಿದೆ.
ಕೃಷಿ ಪ್ರಾಧಾನ್ಯತೆ – ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದರಿಂದ ಕೃಷಿಯಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕೆಲಸಗಳು ಲಭ್ಯವಿರುತ್ತವೆ. ಇದರಿಂದಾಗಿ ಭಾರತದಲ್ಲಿ ಹೆಚ್ಚು ಮಕ್ಕಳನ್ನು ಹೊಂದುವುದು ಭಾರವೆಂದು ಪರಿಗಣಿಸುವುದಿಲ್ಲ.
ಅನಕ್ಷರತೆ – 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಶೇ.26 ರಷ್ಟು ಜನರು ಅನಕ್ಷರಸ್ಥರಿದ್ದಾರೆ. ಅನಕ್ಷರತೆಯು ಜನರಲ್ಲಿ ಮೌಡ್ಯತೆ ಮತ್ತು ಅತಾರ್ಕಿಕ ಮನೋಭಾವನೆಯನ್ನು ಬೆಳೆಸುತ್ತದೆ. ಅನಕ್ಷರಸ್ಥರು ಕುಟುಂಬ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುತ್ತಾರೆ.
ಸಾರ್ವತ್ರಿಕ ಮದುವೆ – ಬಾರತದಲ್ಲಿ ವಿವಾಹಕ್ಕೆ ಸಾಕಷ್ಟು ಮಹತ್ವವಿದೆ. ಭಾರತದಲ್ಲಿ ಮದುವೆಯು ಒಂದು ಕಡ್ಡಾಯ ಸಾಮಾಜಿಕ ಮತ್ತು ಧಾರ್ಮಿಕ ಕ್ರಿಯೆಯಾಗಿದ್ದು, ಮದುವೆಯಾದರೆ ಮಾತ್ರ ಮೋಕ್ಷ ಸಾಧ್ಯ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಇದರಿಂದಾಗಿ ವಿವಾಹಿತರ ಸಂಖ್ಯೆ ಹೆಚ್ಚಿದ್ದು ಅವಿವಾಹಿತರ ಸಂಖ್ಯೆ ತೀರಾ ಕಡಿಮೆ ಇದೆ. ಇದರಿಂದ ಜನಸಂಖ್ಯೆ
ಅವಿಭಕ್ತ ಕುಟುಂಬ ಪದ್ಧತಿ – ಭಾರತದಲ್ಲಿ ಇನ್ನೂ ಅನೇಕ ಕಡೆ ಅವಿಭಕ್ತ ಕುಟುಂಬ ಪದ್ಧತಿ ಜಾರಿಯಲ್ಲಿದೆ. ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಸದಸ್ಯರಿಗೆ ಊಟ, ಬಟ್ಟೆ, ವಸತಿ ಮುಂತಾದ ಸೌಲಭ್ಯಗಳಿಗೆ ಭದ್ರತೆ ಇರುವುದರಿಂದ ಹೆಚ್ಚಿನ ಮಕ್ಕಳನ್ನು ಪಡೆಯಲು ಮುಂದಾಗುತ್ತಾರೆ.
ಚಿಕ್ಕವಯಸ್ಸಿನಲ್ಲಿ ವಿವಾಹ – ಭಾರತದಲ್ಲಿ ವಿವಾಹದ ವಯಸ್ಸನ್ನು ಗಂಡು ಮಕ್ಕಳಿಗೆ 21 ವರ್ಷ ಮತ್ತು ಹೆಣ್ಣುಮಕ್ಕಳಿಗೆ 18 ವರ್ಷ ಎಂದು ನಿಗಧಿಪಡಿಸಲಾಗಿದೆ. ಆದರೆ ಭಾರತದಲ್ಲಿ ಈ ವಯಸ್ಸಿಗೂ ಮೊದಲೇ ವಿವಾಹಗಳು ಜರುಗುತ್ತಿವೆ ಮತ್ತು ಅಲ್ಲಲ್ಲಿ ಬಾಲ್ಯವಿವಾಹ ಪದ್ಧತಿ ಕೂಡ ಜಾರಿಯಲ್ಲಿದೆ. ಇದು ಜನಸಂಖ್ಯೆ ಬೆಳೆಯಲು ಕಾರಣವಾಗಿದೆ.
ಕುಟುಂಬ ನಿಯಂತ್ರಣ ಕ್ರಮಗಳ ಅಳವಡಿಕೆಗೆ ಹಿಂದೇಟು – ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಬಹುತೇಕ ಜನರು ಹಳ್ಳಿಗಳಲ್ಲಿಯೇ ವಾಸ ಮಾಡುತ್ತಿದ್ದಾರೆ. ಇವರಲ್ಲಿ ಮೌಡ್ಯತೆ, ಅಜ್ಞಾನ, ತಪ್ಪುತಿಳಿಕೆ, ಧಾರ್ಮಿಕ ಕಾರಣಗಳು ಮುಂತಾದ ಕಾರಣಗಳಿಂದಾಗಿ ಜನರು ಕುಟುಂಬ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.
ಬಹುಪತಿತ್ವ – ಭಾರತದಲ್ಲಿ ಕೆಲವೊಂದು ಜನಾಂಗ ಮತ್ತು ಕೆಲವೊಂದು ಪ್ರದೇಶಗಳಲ್ಲಿ ಬಹುಪತ್ನಿತ್ವ, ಪದ್ಧತಿ ಅಸ್ತಿತ್ವದಲ್ಲಿದೆ. ಇದರಿಂದಾಗಿ ಜನಸಂಖ್ಯೆ ಏರುತ್ತಿದೆ.
ಹಳ್ಳಿಗಾಡಿನ ರಾಷ್ಟ್ರ – ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಶೇ.70 ಕ್ಕೂ ಹೆಚ್ಚು ಜನರು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅನಕ್ಷರತೆ, ಮೌಡ್ಯತೆ, ಮೂಢನಂಬಿಕೆ, ಸಂಪ್ರದಾಯ ಮನೆ ಮಾಡಿದ್ದು ಅವರು ಮಕ್ಕಳನ್ನು ಹೊರೆ ಎಂದು ಭಾವಿಸುವುದಿಲ್ಲ.
ಭೌಗೋಳಿಕ ಕಾರಣ – ಭಾರತ ಒಂದು ಉಷ್ಣ ಹವಾಮಾನವನ್ನು ಹೊಂದಿರುವ ರಾಷ್ಟ್ರವಾಗಿದ್ದು ಇದು ಜನಸಂಖ್ಯೆಯ ವೃದ್ಧಿಗೆ ಪೂರಕವಾಗಿದೆ. ಉಷ್ಣ ಹವಾಮಾನದಿಂದಾಗಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಬಹಳ ಬೇಗ ಪ್ರೌಢಾವಸ್ಥೆ ತಲುಪುತ್ತಾರೆ. ಇದರಿಂದಾಗಿ ಸಂತಾನೋತ್ಪತ್ತಿಗೆ ಸಾಕಷ್ಟು ಸಮಯಾವಕಾಶ ಲಭ್ಯವಿರುತ್ತದೆ. ಇದರಿಂದ ಜನಸಂಖ್ಯೆಯು ಹೆಚ್ಚಾಗುತ್ತದೆ.
ರಾಜಕೀಯ ಕಾರಣಗಳು – ಭಾರತದಲ್ಲಿ ಇದುವರೆಗೆ ಅಧಿಕಾರಕ್ಕೆ ಬಂದಿರುವ ಯಾವುದೇ ಸರ್ಕಾರ ಜನಸಂಖ್ಯೆಯ ನಿಯಂತ್ರಣಕ್ಕೆ ಯಾವುದೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿಲ್ಲ. ಕೆಲವೊಂದು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿಲ್ಲ. ಕುಟುಂಬ ನಿಯಂತ್ರಣ ಸಲಕರಣೆಗಳು ಸರಿಯಾದ ಸಮಯಕ್ಕೆ ಜನರನ್ನು ತಲುಪುತ್ತಿಲ್ಲ. ಇದೂ ಕೂಡ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ.
ಶಿಕ್ಷಣದ ಕೊರತೆ – ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆ, ಮಿತಿ ಮೀರಿದ ಜನಸಂಖ್ಯೆಯಿಂದಾಗುವ ದುಷ್ಪರಿಣಾಮಗಳು ಲಭ್ಯವಿರುವ ಕುಟುಂಬ ನಿಯಂತ್ರಣ ಕ್ರಮಗಳು ಅವುಗಳನ್ನು ಅಳವಡಿಸಿಕೊಳ್ಳುವ ವಿಧಾನ ಮುಂತಾದವುಗಳ ಬಗ್ಗೆ ಸೂಕ್ತ ವೈಜ್ಞಾನಿಕ ತಳಹದಿ ಹೊಂದಿರುವ ಶಿಕ್ಷಣ ಜನರಿಗೆ ಲಭ್ಯವಿಲ್ಲ. ಇದರಿಂದಾಗಿ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿದೆ.
ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳು
ಯಾವುದೇ ಒಂದು ದೇಶದ ಜನಸಂಖ್ಯೆ ಅಭಿವೃದ್ಧಿಗೆ ಪೂರಕವೂ ಆಗಬಹುದು. ಮಾರಕವೂ ಆಗಬಹುದ ಆದರೆ, ಭಾರತದ ಜನಸಂಖ್ಯಾ ಬೆಳವಣಿಗೆಯು ಭಾರತದ ಪ್ರಗತಿಗೆ ಪೂರಕವಾಗಿರುವುದಕ್ಕಿಂತ ಮಾರಕವಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಮಿತಿಮೀರಿದ ಜನಸಂಖ್ಯೆಯು ಭಾರತ ಎದುರಿಸುತ್ತಿರುವ ಗಂಭೀರ ಸ್ವರೂಪದ ಸಮಸ್ಯೆಗಳಲ್ಲಿ ಒಂದಾಗಿದ್ದು ತನ್ನದೇ ಆದ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅವುಗಳೆಂದರೆ,
ಬಡತನ – ಭಾರತದಲ್ಲಿ ಜನಸಂಖ್ಯಾ ಸ್ಫೋಟವು ಸೃಷ್ಟಿಸಿರುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಬಡತನ ಸಮಸ್ಯೆಯು ಒಂದು ಮಿತಿಮೀರಿದ ಜನಸಂಖ್ಯೆಯಿಂದಾಗಿ ಭಾರತದಲ್ಲಿ ಸುಮಾರು ಶೇ. 30 ಕ್ಕಿಂತಲೂ ಹೆಚ್ಚು ಜನರು ಇಂದಿಗೂ ಬಡತನದ ಬೇಗೆಯಲ್ಲಿ ನರಳುತ್ತಿದ್ದು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೆ ಬದುಕುತ್ತಿದ್ದಾರೆ.
ನಿರುದ್ಯೋಗ – ಭಾರತದಲ್ಲಿ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿರುವುದರಿಂದ ಎಲ್ಲರಿಗೂ ಉದ್ಯೋಗ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. 2006ರ ಅಂಕಿ ಅಂಶಗಳ ಪ್ರಕಾರ ದೇಶಾದ್ಯಂತ ಸುಮಾರು 947 ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 4 ಕೋಟಿಗೂ ಅಧಿಕ ಜನರು ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದರು. 2009-10ನೇ ಸಾಲಿನ NSSO ವರದಿಯ ಪ್ರಕಾರ ದೇಶಾದ್ಯಂತ 28 ಮಿಲಿಯನ್ ಜನರು ನಿರುದ್ಯೋಗಿಗಳಾಗಿದ್ದಾರೆ.
ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತದೆ – ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆಯು ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಜಾತೀಯತೆ ಮುಂತಾದ ಸಮಸ್ಯೆಗಳನ್ನು ಸೃಷ್ಟಿಸಿ ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ಕನಿಷ್ಠ ಜೀವನ ಮಟ್ಟ – ಭಾರತದಲ್ಲಿ ತಲಾದಾಯ ಕಡಿಮೆ ಇದೆ, ಕಡಿಮೆ ತಲಾದಾಯವು ಹೆಚ್ಚು ಜನರ ನಡುವೆ ಹಂಚಿಕೆಯಾಗಿ ವ್ಯಕ್ತಿಯ ಜೀವನಮಟ್ಟ ಕುಸಿಯುತ್ತಿದೆ.
ಆಹಾರದ ಕೊರತೆ – ಭಾರತದಲ್ಲಿ ಮಿತಿಮೀರಿದ ಜನಸಂಖ್ಯೆಯಿಂದಾಗಿ ಆಹಾರ ಸಮಸ್ಯೆ ತಲೆದೋರಿದೆ. 1950- 51ರಲ್ಲಿ 50.8 ಮಿಲಿಯನ್ ಟನ್ಗಳಷ್ಟಿದ್ದ ಭಾರತದ ಆಹಾರ ಉತ್ಪಾದನೆ 2010-11ರ ವೇಳೆಗೆ 242 ಮಿಲಿಯನ್ – ತಲುಪಿದೆ. ಆದರೆ ಮಿತಿಮೀರಿದ ಜನಸಂಖ್ಯೆಯಿಂದಾಗಿ ಭಾರತದಲ್ಲಿ ಆಹಾರ ಸಮಸ್ಯೆ ತಲೆದೋರಿದೆ.
ಅನವಶ್ಯಕ ಒತ್ತಡ ಸೃಷ್ಟಿ – ಹೆಚ್ಚುತ್ತಿರುವ ಜನಸಂಖ್ಯೆಯು ಶಿಕ್ಷಣ, ಆರೋಗ್ಯ, ಸಾರಿಗೆ, ನೈರ್ಮಲ್ಯ, ಅರಣ್ಯ ಮುಂತಾದ – ಕ್ಷೇತ್ರಗಳ ಮೇಲೆ ಅನವಶ್ಯಕ ಒತ್ತಡವನ್ನು ಸೃಷ್ಟಿಸುತ್ತಿದೆ.
ಕಡಿಮೆ ತಲಾದಾಯ – ಭಾರತದಲ್ಲಿ ಸ್ವಾತಂತ್ರ್ಯಾ ನಂತರ ರಾಷ್ಟ್ರೀಯ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಅದು ಅಗಾಧವಾಗಿ ಬೆಳೆಯುತ್ತಿರುವ ಜನರ ನಡುವೆ ಹಂಚಿ ಹೋಗಿದೆ. ಇದರಿಂದಾಗಿ ಸಹಜವಾಗಿಯೇ ವ್ಯಕ್ತಿಯ ತಲಾದಾಯ ಕಡಿಮೆ ಇದೆ. 2010-11ರ ವೇಳೆಗೆ ಭಾರತದಲ್ಲಿ ವ್ಯಕ್ತಿಯೊಬ್ಬನ ತಲಾದಾಯ ಕೇವಲ 53331 ರೂಗಳಷ್ಟಿದೆ.
ಕೃಷಿ ಮೇಲೆ ಅಧಿಕ ಒತ್ತಡ – ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಕೃಷಿ ಕ್ಷೇತ್ರದ ಮೇಲೆ ಅಧಿಕ ಒತ್ತಡ ಬೀಳುತ್ತದೆ. ಇದರಿಂದಾಗಿ ಲಭ್ಯವಿರುವ ವ್ಯವಸಾಯ ಯೋಗ್ಯವಾದ ಭೂಮಿಯ ಛಿದ್ರೀಕರಣ, ಅರಣ್ಯ ನಾಶ, ಪರಿಸರ ಮಾಲಿನ್ಯ ಮುಂತಾದ ಸಮಸ್ಯೆಗಳು ತಲೆದೋರುತ್ತಿವೆ.
ಮೂಲಭೂತ ಸೌಕರ್ಯಗಳ ಮೇಲಿನ ವೆಚ್ಚ ಏರಿಕೆ – ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಜನರ ಮೂಲಭೂತ ಅಗತ್ಯಗಳಾದ ವಸತಿ, ಶಿಕ್ಷಣ, ಆರೋಗ್ಯ, ನೈರ್ಮಲ್ಯ ಕುಡಿಯುವ ನೀರು ಮುಂತಾದ ಮೂಲಭೂತ ಸೌಲಭ್ಯಗಳ ಮೇಲೆ ಸರ್ಕಾರ ಅಧಿಕ ವೆಚ್ಚ ಮಾಡಬೇಕಾಗಿದೆ. ಇದರಿಂದಾಗಿ ಬಂಡವಾಳದ ಕೊರತೆ ಉಂಟಾಗಿ ವಿವಿಧ ಕ್ಷೇತ್ರಗಳ ಪ್ರಗತಿ ಕುಂಠಿತವಾಗಿದೆ.
ಜನಸಂಖ್ಯಾ ನಿಯಂತ್ರಣ ವಿಧಾನಗಳು
ಭಾರತದಲ್ಲಿ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯು ಅಭಿವೃದ್ಧಿಗೆ ಅಡ್ಡಿ ಉಂಟುಮಾಡುತ್ತಿರುವ ಪ್ರಮುಖ ಅಂಶಗಳಲ್ಲೊಂದಾಗಿದ್ದು ಭಾರತದ ಆರ್ಥಿಕತೆಯ ಮೇಲೆ ಅಗಾಧ ಪ್ರಮಾಣದ ಹಾನಿಯುಂಟು ಮಾಡಿದೆ. ಆದ್ದರಿಂದ ಜನಸಂಖ್ಯೆಯನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಅವುಗಳೆಂದರೆ,
- ತೀವ್ರ ಕೈಗಾರಿಕಾಭಿವೃದ್ಧಿಯ ಮೂಲಕ ಕೃಷಿ ಕ್ಷೇತ್ರದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು. ಸರ್ಕಾರ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕು.
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಜನರಿಗೆ ಶಿಕ್ಷಣ ಒದಗಿಸಬೇಕು.
- ಶಿಕ್ಷಣವು ವಿವಾಹ, ಕುಟುಂಬದ ಗಾತ್ರ, ಮಕ್ಕಳ ಬಗೆಗಿನ ಅವರ ಚಿಂತನೆ ಮತ್ತು ನಡವಳಿಕೆಯನ್ನು ಬದಲಿಸುತ್ತದೆ.
- ಪ್ರಚಾರ ಆಂದೋಲನ, ಔಪಚಾರಿಕ ಶಿಕ್ಷಣ ಮುಂತಾದ ಕ್ರಮಗಳ ಮೂಲಕ ಜನರು ಕುಟುಂಬ ಯೋಜನಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು.
- ಪ್ರಸ್ತುತ ಇರುವ ವಿವಾಹದ ವಯಸ್ಸನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. 1978ರಲ್ಲಿ ಭಾರತ ಸರ್ಕಾರ ವಿವಾಹದ ಕನಿಷ್ಠ ವಯಸ್ಸನ್ನು ಪುರುಷರಿಗೆ 21, ಮಹಿಳೆಯರಿಗೆ 18 ಎಂದು ನಿಗದಿಪಡಿಸಿದ್ದು ಪ್ರಸ್ತುತ ಸಂದರ್ಭದಲ್ಲಿ ಮರುಪರಿಶೀಲಿಸುವ ಅಗತ್ಯ ಇದೆ
- ಮಹಿಳೆಯರಿಗೆ ಉತ್ತಮ ಶಿಕ್ಷಣ ಮತ್ತು ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಬೇಕು. ಇದರಿಂದಾಗಿ ಕುಟುಂಬದ ಗಾತ್ರದ ಆಯ್ಕೆ, ಮಕ್ಕಳನ್ನು ಪಡೆಯುವಿಕೆ ಮುಂತಾದ ವಿಷಯಗಳಲ್ಲಿ ಮಹಿಳೆಗೆ ಸ್ವಾತಂತ್ರ್ಯ ಸಿಗಲಿದೆ. ಇದು ಜನಸಂಖ್ಯೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
- ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗಲು ಪ್ರೋತ್ಸಾಹಿಸಬೇಕು. ಇದರಿಂದಾಗಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಿಂದ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಕ್ಕೆ ವಲಸೆ ಹೋಗುತ್ತಾರೆ. ಇದರಿಂದ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿನ ಬಡತನ, ನಿರುದ್ಯೋಗ, ಅರೆ ಉದ್ಯೋಗ ಮುಂತಾದ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
- ಸಾರಿಗೆ, ಸಂಪರ್ಕದ ಅಭಿವೃದ್ಧಿಗೆ ಗಮನ ಹರಿಸಬೇಕು. ಇದರಿಂದ ವಿವಿಧ ಪ್ರದೇಶಗಳ ಜನರ ನಡುವೆ ಸಂಪರ್ಕ ಏರ್ಪಟ್ಟು ಚಿಕ್ಕ ಕುಟುಂಬಗಳ ಅಳವಡಿಕೆಗೆ ಜನರು ಮುಂದಾಗುತ್ತಾರೆ.
- ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದರಿಂದ ಕೃಷಿ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕು. ಇದರಿಂದ ಜನರ ಆದಾಯ ಹೆಚ್ಚಾಗಿ ಮೊದಲಿಗಿಂತಲೂ ಚಿಕ್ಕ ಕುಟುಂಬವನ್ನು ಹೊಂದಲು ಮುಂದಾಗುತ್ತಾರೆ.